Monday, February 27, 2017

ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ" - ಸಂವಾದ

ನನ್ನ ಬ್ಲಾಗ್ ಬರಹ "ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ"" ಇದಕ್ಕೆ ಹಿರಿಯ ವಿದ್ವಾಂಸರಾದ ಶ್ರೀಯುತ ಸುಧೀಂದ್ರ ದೇಶಪಾಂಡೆಯವರ ಪ್ರತಿಕ್ರಿಯೆ ಅವರ ಸಲ್ಲಾಪ ಬ್ಲಾಗಿನಲ್ಲಿ ಪ್ರಕಟವಾಗಿದೆ "ಕನ್ನಡದಲ್ಲಿ apple".  ಅದಕ್ಕೆ ಪ್ರತಿಕ್ರಿಯೆಯನ್ನು ಬರೆಯುತ್ತಾ ಅದೇ ಒಂದು ಲೇಖನವಾದ್ದರಿಂದ ಅದನ್ನಿಲ್ಲಿ ಪ್ರಕಟಿಸುತ್ತಿದ್ದೇನೆ.  ಕನ್ನಡದ ಹಿತದೃಷ್ಟಿಯಿಂದ ಇಂಥಾ ವಿದ್ವಚ್ಚರ್ಚೆಗಳು ಹೆಚ್ಚಾಗಲೆಂದು ನನ್ನ ಹಾರೈಕೆ.  ಆಸಕ್ತರು ಎರಡೂ ಲೇಖನಗಳನ್ನು ಬೇರೆಬೇರೆ ಕಿಟಕಿಯಲ್ಲಿ ತೆರೆದಿಟ್ಟುಕೊಂಡು ಓದಿದರೆ ಚೆನ್ನು.

ಪ್ರಿಯ ಸುಧೀಂದ್ರ ದೇಶಪಾಂಡೆಯವರೇ,

ನನ್ನದೊಂದು ಬರಹ ತಮ್ಮ ಬ್ಲಾಗಿನಲ್ಲಿ ಕಾಣಿಸಿಕೊಂಡುದು ನನಗೆ ಹೆಮ್ಮೆ.  ಇದಕ್ಕಾಗಿ ತಮಗೆ ಧನ್ಯವಾದಗಳು.  ವಿಷಯದ ವಾಸ್ತವ ಚರ್ಚೆಗೆ ಹೋಗುವ ಮುನ್ನ ಕೆಲವು ವೈಯಕ್ತಿಕ ಗ್ರಹಿಕೆಗಳನ್ನು ಸ್ಪಷ್ಟಪಡಿಸಲಿಚ್ಛಿಸುವೆ.  ಮೊದಲಿಗೆ, ನನ್ನ ಲೇಖನವು ಪದಾರ್ಥಚಿಂತಾಮಣಿಯಲ್ಲಿ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯೆಯಲ್ಲ - ಪದಾರ್ಥಚಿಂತಾಮಣಿಯ ಚರ್ಚೆಯನ್ನು ಸ್ಥೂಲವಾಗಿ ಗಮನಿಸಿದ್ದೆನಾದರೂ, ಲೇಖನವನ್ನು ಬರೆದಾಗ ನನ್ನ ದೃಷ್ಟಿಯಲ್ಲಿದ್ದದ್ದು ರಾಜೇಶರು ಅವರ ಪುಟದಲ್ಲಿ ಪ್ರಕಟಿಸಿದ್ದ ಲೇಖನವಷ್ಟೇ.  ಇದೀಗ ನಿಮ್ಮ ಲೇಖನವನ್ನೋದಿದಮೇಲೆ, ಪದಾರ್ಥಚಿಂತಾಮಣಿಯ ಚರ್ಚೆಯನ್ನೂ, ವಿಶೇಷವಾಗಿ ತಮ್ಮ ಪ್ರತಿಕ್ರಿಯೆಗಳನ್ನೂ ಮತ್ತೊಮ್ಮೆ ಕೂಲಂಕಶವಾಗಿ ಓದಿಕೊಂಡೆ.  ನಿಜ ಹೇಳಬೇಕೆಂದರೆ, ಕೆಲವು ವಿಷಯಗಳನ್ನು ಬಿಟ್ಟರೆ ತಮ್ಮ ನಿಲುವುಗಳ ಬಗ್ಗೆ ನನಗೆ ಒಮ್ಮತವೇ ಇದೆ (ಅಪವಾದಗಳನ್ನು ಮುಂದೆ ಚರ್ಚಿಸುತ್ತೇನೆ).  ಅಲ್ಲದೇ ಒಬ್ಬ ಅಪರೂಪದ ವಿದ್ವಾಂಸರಾಗಿ, ಹಿರಿಯರಾಗಿ ತಮ್ಮನ್ನು ಹಲವು ವರ್ಷಗಳಿಂದ ಬಲ್ಲ ನಾನು ತಮ್ಮನ್ನು "ಮಂದ ಕಿವಿಯ ಸುಧಾರಣಾವಾದಿ"ಗಳ ಗುಂಪಿಗೆ ಸೇರಿಸುವುದು ಶಕ್ಯವೇ ಇಲ್ಲ.  ಇನ್ನೂ ಮುಂದುವರೆದು "Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ... ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ. ನಿಜ ಹೇಳಬೇಕೆಂದರೆ, ಈ ಭೂಮಂಡಲದ ಮೇಲೆ ಎಷ್ಟು ಮಾನವರಿದ್ದಾರೊ, ಅಷ್ಟೇ ಉಚ್ಚಾರಪ್ರಭೇದಗಳಿವೆ.  ಆದುದರಿಂದ ಯಾವುದು ಗ್ರಾಹ್ಯ ಯಾವುದು ಅಗ್ರಾಹ್ಯ ಎನ್ನುವುದನ್ನು ನಾವು ಸಮಾಧಾನದಿಂದ ಲೆಕ್ಕಿಸುವುದು ಒಳಿತು" ಎಂಬ ಪ್ರಬುದ್ಧವಾದ ಮಾತು ತಮ್ಮಂತಹ ಹಿರಿಯ ವಿದ್ವಾಂಸರಿಂದ ಬರಬಲ್ಲುದಷ್ಟೇ ಹೊರತು "ಮಂದ ಕಿವಿಯ ಸುಧಾರಣಾವಾದಿ"ಗಳಿಂದ ಖಂಡಿತಾ ಅಲ್ಲ.  ""A = ಅ (ಅರ್ಧ) + ಯಾ" ಎನ್ನುವುದು ಋ = ರ್, ಐ = ಅಯ್ ಅಥವಾ ಔ = ಅವ್ ಎನ್ನುವಷ್ಟೇ ತಪ್ಪು ವಾದ" ಎಂಬ ನನ್ನ ಪೂರ್ಣವಾಕ್ಯವನ್ನಷ್ಟು ಪರಿಗಣಿಸಬೇಕೆಂದು ವಿನಂತಿ.  ಅಲ್ಲಿನ ಇತರ ಉದಾಹರಣೆಗಳು ಎಲ್ಲಿಂದ ಬರುತ್ತವೆಂಬುದು ತಮಗೆ ಗೊತ್ತು.  ಅಂಥಾ ’ಸುಧಾರಣಾವಾದಿ’ಗಳ ಉದಾಹರಣೆಯನ್ನು ತಾವೇ ತಮ್ಮ ಲೇಖನದಲ್ಲೇ ಹಿಂದಿನ ಪ್ಯಾರಾದಲ್ಲೇ ಸೂಚಿಸಿದ್ದೀರಿ.  ಇಷ್ಟು ಹೇಳಿದ ಮೇಲೆ, ತಾವು ಎತ್ತಿದ ಆಕ್ಷೇಪಗಳನ್ನಿಷ್ಟು ಪರಿಶೀಲಿಸಬಹುದು.

(೧) "Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ (ಆ್ಯ) ಇರುವಂತೆಯೇ ಇರುತ್ತದೆ ಎಂದು ಮಂದಕಿವಿಯ ನಾವ್ಯಾರೂ ಹೇಳುತ್ತಿಲ್ಲ. ಆದರೆ ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ."
ಇದು ಅತಿ ಸನಿಹದ ಉಚ್ಚಾರ ಎಂಬುದು ನಾನೂ ಒಪ್ಪತಕ್ಕ ಮಾತೇ, ಇಷ್ಟರಲ್ಲಿ ತಕರಾರೇನು ಇಲ್ಲ.  ಹಾಗಿದ್ದರೆ "ಆ್ಯ" ಎಂದು ಹೇಳುವುದರಲ್ಲಿ ತಪ್ಪೇನು ಎನ್ನುವುದಕ್ಕೆ ಸಮಾಧಾನವನ್ನು ನನ್ನ ಲೇಖನದಲ್ಲೇ ಕೊಟ್ಟಿದ್ದೇನೆ, ತಮ್ಮ ಮುಂದಿನ ಅಂಶಗಳ ಮೇಲಿನ ನನ್ನ ಪ್ರತಿಕ್ರಿಯೆಯಲ್ಲಿ ಇದನ್ನು ಇನ್ನಷ್ಟು ವಿವರವಾಗಿ ಪರಿಶೀಲಿಸಬಹುದು.

(೨) "ನಾನಾದರೂ ಸಹ ಅದೇ ತರ್ಕವನ್ನು ಬಳಸಿ ‘ಆ’ ಸ್ವರಕ್ಕೆ ‘ಯ’ದ ಒತ್ತು ಕೊಡಬೇಕು (ಆ್ಯ)". ಏಕೆಂದರೆ ಅದೇ ಅತಿ ಹತ್ತಿರದ ಉಚ್ಚಾರ ಎಂದು ಹೇಳುತ್ತಿರುವುದು. ಅವರು ಹೇಳಿದಂತೆ, ‘ಯಾಪಲ್’ ಎಂದು ಬರೆದರೆ, ಈ ಪದದ ಉಚ್ಚಾರವು yaple ಎಂದು ಆಗುವುದು!"
ಪ್ರಸ್ತುತ ಆ ಅಥವಾ ಯಾ ಎಂಬ ಸಾಧ್ಯವಾದಷ್ಟು ಹತ್ತಿರದ ಸಂಕೇತವನ್ನು ಬಳಸುತ್ತಿರುವ ಉದ್ದೇಶವಾದರೂ ಏನು?  ನಮ್ಮ ಈಗಿರುವ ಚೌಕಟ್ಟಿನಲ್ಲಿ ಇದಕ್ಕೆ ಅತಿ ಹತ್ತಿರದ್ದಾಗಿ ಒದಗುವುದು ಎಂದು ತಾನೆ?  ಈಗ ಆ್ಯ ಎಂಬ ಹೊಸ ಅಕ್ಷರವೊಂದನ್ನು ತಂದೂ ಅದು ಮೂಲ ಉಚ್ಚಾರಣೆಯನ್ನು ಯಥಾವತ್ ಪ್ರಸ್ತುತಪಡಿಸಲಾಗದೇ ಕೇವಲ ’ಹತ್ತಿರ’ದ ಉಚ್ಚಾರಣೆಯಷ್ಟೇ ಆಗುವುದಾದರೆ, ಅದಕ್ಕಾಗಿ ಇರುವ ಚೌಕಟ್ಟನ್ನೇ ಸಡಿಲಿಸುವಂಥ ದೊಡ್ಡ ಬೆಲೆಯನ್ನು ತೆರುವ ಅಗತ್ಯವೇನು (ಅದು ’ದೊಡ್ಡ ಬೆಲೆ’ ಏಕೆನ್ನುವುದನ್ನು ಮುಂದೆ ವಿವರಿಸುತ್ತೇನೆ).

(೩a) "ಅವರ ಪ್ರಯತ್ನವನ್ನು ನಾವು ಸ್ವಲ್ಪವಾದರೂ ಮುಂದುವರಿಸಿ, ಲಿಪಿವರ್ಧನೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದು ಸರಿಯೊ ಅಥವಾ ಇದ್ದ ಸಂಕೇತಗಳನ್ನು ಕತ್ತರಿಸಿ ಹಾಕಿ ನಮ್ಮ ದಡ್ಡ ಗೋಣನ್ನು ಮೇಲೆತ್ತುವುದು ಸರಿಯೊ?"
ಲಿಪಿವರ್ಧನೆ ಆಗಬಾರದೆಂಬುದು ನನ್ನ ಅಭಿಪ್ರಾಯವಲ್ಲ, ಆದರೆ ಅದಾಗುವ ಮೊದಲು ಈಗಿರುವ ಚೌಕಟ್ಟನ್ನು ಕೂಲಂಕಷವಾಗಿ ಪರಿಶೀಲಿಸಬೇಕೆನ್ನುವುದು, ಹೊಸ ಸೇರ್ಪಡೆಗಳನ್ನು ಇರುವ ಚೌಕಟ್ಟಿನಲ್ಲಿ ನಿರ್ದಿಷ್ಟವಾಗಿ ಎಲ್ಲಿ ಹೇಗೆ ಸೇರಿಸಬೇಕೆನ್ನುವುದೂ, ಹಾಗೆ ಬರುವ ಸೇರ್ಪಡೆಗಳು ಭಾಷೆಯ ಈಗಿನ ಚೌಕಟ್ಟಿಗನುಗುಣವಾಗಿ ಎಂಥ ಸೇರ್ಪಡೆಯಾಗಿರಬೇಕೆನ್ನುವುದನ್ನು ನಿರ್ಧರಿಸಬೇಕೆನ್ನುವುದೂ, ಹಾಗೆ ನಿರ್ಧರಿಸುವಾಗ ಕೇವಲ ಈಗಿನ ಅಗತ್ಯವಷ್ಟನ್ನಲ್ಲ, ಈ ಬದಲಾವನೆಯ ಭೂತ ಭವಿಷ್ಯದ್ವರ್ತಮಾನಗಳ ಪರಿಣಾಮವನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವೆಂಬುದು ನನ್ನ ಅಭಿಪ್ರಾಯ.  ಇಲ್ಲದಿದ್ದರೆ ಬದಲಾವಣೆ ಮಾಡಬೇಕೆನ್ನುವುದೇ ಒಂದು ಫ್ಯಾಶನ್ ಆಗಿ ಸೂಕ್ಷ್ಮವಾಗಿರುವ ಕನ್ನಡದ ಪರಿಸ್ಥಿತಿ ಮತ್ತಷ್ಟು ಕಠಿನವಾಗಬಾರದೆಂಬುದು ನನ್ನ ಆಶಯ.

ಇನ್ನು "ಸಂಕೇತಗಳನ್ನು ಕತ್ತರಿಸಿ ಹಾಕುವ" ಸಲಹೆಗಳು ನನ್ನಿಂದ ಬಂದಿಲ್ಲವಲ್ಲ!  ನಾನೂ ಅಂಥಾ ಪ್ರಯತ್ನಗಳ ವಿರೋಧಿಯೇ ಎಂಬುದನ್ನು ತಾವು ಬಲ್ಲಿರಿ.

(೩b) "ನಾವು ಸಂಸ್ಕೃತವನ್ನು ಗೌರವಿಸೋಣ. ಆದರೆ ನಾಗರಿ ಲಿಪಿಯ ಅಸಮರ್ಪಕತೆಯನ್ನು ಅಳವಡಿಸಿಕೊಳ್ಳುವುದು ಬೇಡ. ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ. ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು.  ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ"
ದೇವನಾಗರಿ ಸ್ವಯಂಸಂಪೂರ್ಣವಲ್ಲ ಎಂಬುದು ವೇದ್ಯವಾಗಿಯೇ ಇದೆ.  ಇದರಲ್ಲಿ ತಕರಾರಿಲ್ಲ.  ಮತ್ತು ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು ಎಂಬುದು ನನ್ನ ಅಭಿಪ್ರಾಯ ಕೂಡ.  ಆದರೆ ನಾವು ಹಾಗೆಲ್ಲಿ ಮಾಡುತ್ತಿದ್ದೇವೆ?  ಕನ್ನಡದ ವ್ಯಾಕರಣವು ಇದುವರೆಗೆ ಅನುಸರಿಸಿರುವ ದಾರಿಯೂ ಇದೇ ಅಲ್ಲವೇ?  ಸಂಸ್ಕೃತದ ತರ್ಕಬದ್ಧವಾದ ವೈಜ್ಞಾನಿಕವಾದ ಹಂದರವನ್ನು ಒಳಗೊಳ್ಳುವ ಮೂಲಕ ಅದರ ಲಾಭಗಳನ್ನು ಪಡೆದಿದೆ, ಆದರೆ ಅದೇ ಸಮಯದಲ್ಲಿ ಅದನ್ನು ಕನ್ನಡದ ಪ್ರಸ್ತುತತೆಗನುಗುಣವಾಗಿ ಮಾರ್ಪಡಿಸಿಕೊಂಡಿದೆ ಕೂಡ.  ಅದೇ ಕಾರಣಕ್ಕೇ ಸಂಸ್ಕೃತದಲ್ಲಿಲ್ಲದ ಎ ಮತ್ತು ಒ ಅಕ್ಷರಗಳನ್ನೂ, ಱೞಳ ಅಕ್ಷರಗಳನ್ನೂ ಕನ್ನಡದಲ್ಲಿ ನಾವು ಕಾಣುತ್ತೇವೆ.  ಅದರಲ್ಲೂ ತನ್ನ ಕಾಲಕ್ಕಾಗಲೇ ಬಳಕೆಯಿಂದ ಮರೆಯಾಗಿಯೇ ಹೋಗಿದ್ದರೂ ಱೞ ಅಕ್ಷರಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನಗಳನ್ನು ಕೇಶಿರಾಜನು ಮಾಡಿರುವುದನ್ನು ಕಾಣಬಹುದು (ತಿಳಿ ದೇಶೀಯಮಮೈದಂ; ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪಕ್ಷಳನಂ; ನಾಲ್ವತ್ತೇೞಾಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ - ಶಬ್ದಮಣಿದರ್ಪಣ).  ಆಮೇಲೆ ಅವು ವರ್ಣಮಾಲೆಯಿಂದ ಏಕೆ ಮರೆಯಾದುವೆನ್ನುವುದು ಬೇರೆಯೇ ಚರ್ಚೆಯ ವಿಷಯ.  ಅಷ್ಟೇ ಅಲ್ಲ, ಕನ್ನಡದಲ್ಲಿಲ್ಲವೆನ್ನುವ ಕಾರಣಕ್ಕೆ ಸಂಸ್ಕೃತದ ಋಲೃ ವರ್ಣಗಳನ್ನೂ ಶಷಗಳನ್ನೂ ವಿಸರ್ಗ, ೱಕ, ೲಪ ಗಳನ್ನೂ ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯುತ್ತಾನೆ ಕೇಶಿರಾಜ.  ಆದರೆ ಕನ್ನಡ ಮತ್ತು ಸಮಸಂಸ್ಕೃತಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಕಾರಣದಿಂದಲೂ, ವರ್ಣಮಾಲೆಯ ತಾರ್ಕಿಕ ಪೂರ್ಣತೆಯನ್ನು ಕಾಯುಕೊಳ್ಳುವ ದೃಷ್ಟಿಯಿಂದಲೂ ಋಶಷಗಳೂ ವಿಸರ್ಗವೂ ಮತ್ತೆ ಸೇರಿಕೊಳ್ಳುತ್ತವೆ (ವ್ಯಾಕರಣದಲ್ಲೂ ಇಂಥ ಹಲವು ’ಅಳವಡಿಕೆ’ಗಳನ್ನು ವಿವರಿಸಬಹುದು, ಆದರೆ ಸಧ್ಯದ ಚರ್ಚೆಗೆ ಅದು ಅಪ್ರಸ್ತುತ).  ಆದ್ದರಿಂದ ಸಂಸ್ಕೃತವನ್ನು ಕನ್ನಡ ಕುರುಡಾಗಿ ಅನುಸರಿಸುತ್ತಿದೆಯೆಂಬುದೂ ಅದರ ಸ್ವತಃ ತನಗೆ ಶಕ್ತಿಯಿದ್ದಾಗ್ಯೂ ಅದರ ದೋಷಗಳನ್ನು ತಾನೂ ಒಳಗೊಳ್ಳುತ್ತಿದೆಯೆನ್ನುವುದೂ ಒಪ್ಪತಕ್ಕ ಮಾತಲ್ಲ.

(೩c) "च (ಚ )ಕಾರದ ಮೇಲ್ಕಟ್ಟಿನಲ್ಲಿ ಒಂದು ಮೇಲ್-ಗೆರೆ ಎಳೆದಾಗ चे (ಚೆ) ಆಗುತ್ತದೆ. ಎರಡು ಗೆರೆ ಎಳೆದಾಗ चै (ಚೈ) ಆಗುತ್ತದೆ. ಇದೇ ತತ್ವವನ್ನು ಅನುಸರಿಸಿ, चा (ಚಾ) ಕಾರದ ಮೇಲೆ ಎರಡು ಗೆರೆ ಎಳೆದಾಗ ಅದು chaai ಆಗಲಾದರು. ಏಕೆಂದರೆ ಅದು चौ (ಚೌ) ಆಗುತ್ತದೆ. ‘ಆ’ ಎನ್ನುವ ಸ್ವರಕ್ಕೆ ‘ಇ’ಸ್ವರವನ್ನು ಕೂಡಿಸಲು ಈ ಕಾರಣದಿಂದ ನಾಗರಿ ಲಿಪಿಯಲ್ಲಿ ಸಾಧ್ಯವೇ ಇಲ್ಲ. ಇದರಂತೆ ನಾಗರಿ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವೇ ಇಲ್ಲ. ಏಕೆಂದರೆ ನಾಗರಿ ಲಿಪಿಯಲ್ಲಿ ಒತ್ತಿನ ಸಂಕೇತವು ಪೂರ್ವಾಕ್ಷರದ ಮುಂದೆ ಬರುತ್ತದೆ. ಕನ್ನಡದಲ್ಲಿ ಇದು ಪೂರ್ವಾಕ್ಷರದ ಕೆಳಗೆ ಬರುತ್ತದೆ"
ದೇವನಾಗರೀ ಲಿಪಿ ಅಸಂಪೂರ್ಣ ಎಂಬುದಕ್ಕೆ ತಾವು ಈ ಉದಾಹರಣೆ ನೀಡುತ್ತಿದ್ದರೆ, ಅದನ್ನು ನಾವು ಆಗಲೇ ಒಪ್ಪಿಯಾಗಿದೆ.  ಆದರೆ ಈ ಉದಾಹರಣೆ ಅದಕ್ಕೆ ಸಮರ್ಪಕವಾದ ಉದಾಹರಣೆಯಾಗಲಾರದು.  ದೇವನಾಗರಿಯಲ್ಲಿ ಚಾ+ಐತ್ವ ಬರೆಯಲಾಗದ್ದು ಅದರ ಲಿಪಿಯ ಅಸಂಪೂರ್ಣತೆಯಿಂದ ಎನ್ನುವುದಕ್ಕಿಂತ ಅಲ್ಲಿ ಅದರ ಅಗತ್ಯವಿಲ್ಲ ಎಂಬ ಕಾರಣದಿಂದ.  ಅಗತ್ಯವಿದ್ದಿದ್ದರೆ ಅದಕ್ಕನುಗುಣವಾಗಿ ಲಿಪಿ ರೂಪುಗೊಳ್ಳುತ್ತಿತ್ತು.  ಕನ್ನಡದಲ್ಲಿ ಅದರ ಲಿಪಿಸಾಧ್ಯತೆಯಿದೆ, ಆದರೆ ಅದನ್ನು ನಾವೆಲ್ಲಿ ಬಳಸುತ್ತಿದ್ದೇವೆ?  ಏಕೆಂದರೆ ಸಧ್ಯಕ್ಕೆ ನಮಗದರ ಅಗತ್ಯ ಕಂಡಿಲ್ಲ - ಏಕೆಂದರೆ ಚಾ ಅಕ್ಷರಕ್ಕೆ ಐತ್ವ ಕೊಡುವುದಾದರೆ ಅದು ಚಾಯ್ ಎಂಬ ಪದವೇ ಆಗುತ್ತದೆ, ಅದು ಈಗಾಗಲೇ ಸಾಧ್ಯ.  ಚೈ ಮತ್ತು ಚಯ್ ಗಳ ನಡುವಿರುವ ಸೂಕ್ಷ್ಮ ವ್ಯತ್ಯಾಸ ಚಾ(ಐ) ಮತ್ತು ಚಾಯ್ ಗಳ ನಡುವೆ ಇಲ್ಲ.  ಸಂಸ್ಕೃತದಲ್ಲಿ ಆ ಲಿಪಿಸಾಧ್ಯತೆ ಬರದಿದ್ದುದಕ್ಕೆ ಅದೇ ಕಾರಣವಿರಬಹುದು.

ಆದರೆ ನಾಗರೀ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವಿಲ್ಲ ಎಂಬುದು ಒಪ್ಪತಕ್ಕ ಮಾತಲ್ಲ.  ಕೊಡುವ ಅಗತ್ಯವಿದ್ದರೆ ಬೇರೆಲ್ಲ ಪೂರ್ವಾಕ್ಷರಗಳನ್ನೂ ಅರ್ಧ ಬರೆದು ಮುಂದಿನ ಒತ್ತನ್ನು ಪೂರ್ಣಾಕ್ಷರವಾಗಿ ಬರೆಯುವಂತೆ ಇದನ್ನೂ ಬರೆಯಬಹುದು, अ್या ಎಂಬಂತೆ (ಇಲ್ಲಿ ಯೂನಿಕೋಡ್ ಇದನ್ನು ಬರೆದು ತೋರಿಸಲು ಸಹಕರಿಸುತ್ತಿಲ್ಲ, अ ಅಕ್ಷರದ ಉದ್ದಗೀಟನ್ನೂ ತಲಕಟ್ಟನ್ನೂ ತೆಗೆದುಹಾಕಿ, ಬಳ್ಳಿಯ ನಡುಗೀಟಿಗೆ ಹೊಂದಿದಂತೆ या ಬರೆಯಿರಿ, ನಿಮಗೆ ಬೇಕಾದ ಅಕ್ಷರ ಸಿಗುತ್ತದೆ.  ಕನ್ನಡದಲ್ಲೂ ಬರೆಯುವುದು ಸಾಧ್ಯವಂತೂ ಇದೆ (ಯೂನಿಕೋಡ್ ಸಹಕರಿಸದಿದ್ದರೂ ಮತ್ತೊಂದರ ಸಹಕಾರದಿಂದ ಇಲ್ಲೂ ಬರೆಯುತ್ತೇನೆ ನೋಡಿ "ಆ್ಯ").  ಆದರೆ ಸಂಸ್ಕೃತದಲ್ಲಾಗಲೀ ಕನ್ನಡದಲ್ಲಾಗಲೀ ಹಾಗೆ ಬರೆಯದಿದ್ದುದು ಲಿಪಿಸೌಲಭ್ಯದ ಕಾರಣಕ್ಕಲ್ಲ, ಅದು ತಾಂತ್ರಿಕವಾಗಿ ಸರಿಯಲ್ಲ ಎಂಬ ಕಾರಣಕ್ಕೆ.  ಕಾರಣವನ್ನು ಮುಖ್ಯಲೇಖನದಲ್ಲಿ ವಿವರಿಸಿದ್ದೇನೆ.  ಮತ್ತೊಮ್ಮೆ ಕ್ವಚಿತ್ತಾಗಿ ವಿವರಿಸುತ್ತೇನೆ:

ಯಾವುದೇ ಅಕ್ಷರಕ್ಕೆ ಒತ್ತು ಕೊಡಬೇಕೆಂದರೆ ಮುಖ್ಯಾಕ್ಷರವು ಅರ್ಧವಾಗಿಯೂ ಒತ್ತಕ್ಷರವು ಪೂರ್ಣವಾಗಿಯೂ ಬರುವುದು ಅತ್ಯಗತ್ಯ (ಲಿಪಿಯಲ್ಲಲ್ಲ, ಉಚ್ಚಾರಣೆಯಲ್ಲಿ - ದೇವನಾಗರೀ ಲಿಪಿ ಈ ಕ್ರಮವನ್ನನುಸರಿಸುತ್ತದೆ, ಕನ್ನಡ ಲಿಪಿ ಇದರ ವಿರುದ್ಧ, ಅದು ಬೇರೆಯ ವಿಷಯ, ಆದರೆ ಉಚ್ಚಾರಣೆ ಮಾತ್ರ ಭಾಷಾತೀತ) - ಬೇಕಿದ್ದರೆ ಇಂಗ್ಲಿಷಿನಲ್ಲೂ ನೋಡಬಹುದು Tree (ಟ್ರೀ) ಎನ್ನುವಾಗ ಟ್ ಮತ್ತು ರೀ ಎಂಬ ಎರಡು ಅಕ್ಷರಗಳನ್ನು ನೋಡುತ್ತೇವೆ.  ಮುಖ್ಯಾಕ್ಷರವಾದ ಟಕಾರವು ಅರ್ಧವಾಗಿಯೂ ಒತ್ತಕ್ಷರವಾದ ರೀ ಪೂರ್ಣವಾಗಿಯೂ ಬರುತ್ತದೆ (ನಾನು ಹೇಳುತ್ತಿರುವುದು ಉಚ್ಚಾರದ ವಿಷಯ, ಲಿಪಿಯ ವಿಷಯವಲ್ಲ); ಹಿಂದಿಯಲ್ಲಿ ನೋಡಿ रब्डी (ರಬ್ಡೀ) ಎನ್ನುವಾಬ ಬ್ ಮತ್ತು ಡೀ ಎಂಬ ಎರಡು ಅಕ್ಷರಗಳನ್ನು ನೋಡುತ್ತೇವೆ.  ಮುಖ್ಯಾಕ್ಷರವಾದ ಬಕಾರವು ಅರ್ಧವಾಗಿಯೂ ಒತ್ತಕ್ಷರವಾದ ಡೀ ಪೂರ್ಣವಾಗಿಯೂ ಬರುತ್ತದೆ.  ತಮಿಳನ್ನು ನೋಡಿ பைத்யம் (ಪೈತ್ಯಂ) ಇಲ್ಲಿ ತ್ಯ ಅಕ್ಷರದಲ್ಲಿ ಮುಖ್ಯಾಕ್ಷರವಾದ ತಕಾರವು ಅರ್ಧಾಕ್ಷರವಾಗಿಯೂ (த்) ಒತ್ತಕ್ಷರವಾದ ಯಕಾರವು ಪೂರ್ಣಾಕ್ಷರವಾಗಿಯೂ ಬಂದಿದೆ.  ಜ಼ೆಕ್ ರಿಪಬ್ಲಿಕ್ ದೇಶಭಾಷೆಯಾದ ಜ಼ೆಕ್ ನೋಡಿ matka (ಮತ್ಕ = ಅಮ್ಮ) ಎಂಬಲ್ಲಿ ಮುಖ್ಯಾಕ್ಷರವಾದ ತಕಾರವು ಅರ್ಧಾಕ್ಷರವಾಗಿಯೂ ಒತ್ತಕ್ಷರವಾದ ಕಕಾರವು ಪೂರ್ಣಾಕ್ಷರವಾಗಿಯೂ ಬಂದಿದೆ.  ಎಂದರೇನಾಯಿತು? ಇದು ಭಾಷಾತೀತ - ಮತ್ತಿದು ನಿಯಮವಲ್ಲ, ಸಾಧ್ಯತೆ.

ಈಗ, ಸಂಯುಕ್ತಾಕ್ಷರವೊಂದರಲ್ಲಿ ಆಕಾರವನ್ನು ಮುಖ್ಯಾಕ್ಷರವಾಗಿ ಬಳಸಬೇಕೆಂದರೆ ಅದು ಅರ್ಧಾಕ್ಷರವಾಗಬೇಕಲ್ಲವೇ?  ಆಕಾರವನ್ನು ಅರ್ಧವಾಗಿ ನುಡಿಯಲು ಸಾಧ್ಯವೇ?  ಪ್ರಾಯೋಗಿಕವಾಗಿ ಸಾಧ್ಯವೇ ಇಲ್ಲ ಅದು.  ಆಕಾರವನ್ನು ಅರ್ಧ ನುಡಿಯಲು ಹೋದರೆ ಏನೂ ಬರುವುದೇ ಇಲ್ಲ - ಸ್ವರದ ಸ್ವಭಾವವೇ ಹಾಗೆ.  ನೀವು ಸ್ವರವೊಂದಕ್ಕೆ ವ್ಯಂಜನದ ಒತ್ತು ಕೊಟ್ಟಾಗ, ಅರ್ಧಾಕ್ಷರವಾದ ಸ್ವರ ನಿಜದಲ್ಲಿ ಇಲ್ಲವಾಗುತ್ತದೆ, ಒತ್ತಕ್ಷರವಾದ ವ್ಯಂಜನಾಕ್ಷರ ಪೂರ್ಣಾಕ್ಷರವಾಗಿ ಕೇಳುತ್ತದೆ.  ಎಂದರೆ ನೀವು ಆಕಾರಕ್ಕೆ ಯವೊತ್ತು ಕೊಟ್ಟು "ಆ್ಯ" ಎಂದು ಬರೆದಾಗ ಹಾಗೆ ಬರೆಯಬಹುದಷ್ಟೇ ಹೊರತು ಉಚ್ಚರಿಸಲು ಸಾಧ್ಯವೇ ಇಲ್ಲ.  ಹಾಗೆ ಉಚ್ಚರಿಸಿದಾಗ ಮುಖ್ಯಾಕ್ಷರವಾದ ಆ ಕಾರ ಮರೆಯಾಗಿ, ಕೇಳುವುದು ಯಾ ಮಾತ್ರ.  ಹೆಚ್ಚೆಂದರೆ ಅಕಾರದ ಉತ್ಪತ್ತಿಸ್ಥಾನವನ್ನು ನೀವು ಗಂಟಲಿನಲ್ಲಿ ಒತ್ತಿ, ಅನಂತರ ಯಕಾರವನ್ನು ಉಚ್ಚರಿಸುಸುವುದರಿಂದ ಹಾಗೆ ಒತ್ತಿದ್ದು ಯಕಾರದ ಹಿಂದೊಂದು ವಿಚಿತ್ರ ಶಬ್ದವನ್ನು ಮೂಡಿಸುತ್ತದೆಯೇ ಹೊರತು ಅದು ಅಕಾರವೆನ್ನುವಂತಿಲ್ಲ.  ಅದು ಮನದಟ್ಟಾಗಬೇಕಾದರೆ ಯಕಾರವನ್ನು ಕೈಬಿಟ್ಟು ಇನ್ನೂ ಸ್ಪಷ್ಟವಾದ ಇನ್ನೊಂದು ಉದಾಹರಣೆಯನ್ನು ನೋಡೋಣ.  ಮಟ್ಕಾ ಎಂಬ ಪದವನ್ನು ತೆಗೆದುಕೊಳ್ಳಿ.  ಇಲ್ಲಿನ ಟ್ಕಾ ಎಂಬ ಅಕ್ಷರವನ್ನು ಗಮನಿಸಿ.  ಇಲ್ಲಿ ಏನೇನಿದೆ? ಟ್ ಕ್ ಆ ಅಲ್ಲವೇ?  ಮುಖ್ಯಾಕ್ಷರವಾದ ಟಾ ಎಂಬುದು ಸೀಳಿ ಹೋಗಿ, ಮೊದಲ ಭಾಗವಾದ ಟ್ ವ್ಯಂಜನವು ಮೊದಲು ಬಂತು, ಎರಡನೆಯ ಭಾಗವಾದ ಆ ಸ್ವರವು ಕಕಾರಕ್ಕೆ ಹೋಗಿ ಸೇರಿಕೊಂಡಿತು, ಅಲ್ಲವೇ?  ಈಗ ಟ ಅಕ್ಷರದ ಬದಲು ಅ ಅಕ್ಷರಕ್ಕೆ ಕವೊತ್ತು ಕೊಟ್ಟರೆ ಏನಾಗುತ್ತದೆ? (ಅ್ಕ).  ಮೊದಲಾದರೆ ಟಾ ಎಂಬಲ್ಲಿನ ವ್ಯಂಜನ ಸ್ವರಗಳು ಸೀಳಿ ವ್ಯಂಜನವು ಈಕಡೆಯೂ ಸ್ವರವು ಆಕಡೆಯೂ ಹೋಯಿತು.  ಈಗ ಅಕಾರಕ್ಕೇ ಒತ್ತು ಕೊಡುತ್ತಿದ್ದೇವೆ.  ಇಲ್ಲಿ ಸೀಳುವುದು ಯಾವುದು?  ಅ ಅರ್ಧಾಕ್ಷರವು ಸೀಳಿ ಒಂದು ಸೀಳು ಎಡಕ್ಕೆ ಬಂತು (ಅ್ ಎನ್ನೋಣ).  ಇನ್ನು ಕಕಾರಕ್ಕೆ ಬಂದು ಸೇರುವುದೇನು?  ಅ ಅರ್ಧಾಕ್ಷರವೇ? ಅ್ಕ ಎಂಬುದನ್ನು ಉಚ್ಚರಿಸಿ ನೋಡಿ?  ಕಕಾರದನಂತರ ಅಕಾರದ ಪೂರ್ಣಾಕ್ಷರವೇ ಕೇಳುತ್ತದಲ್ಲವೇ? (ಕ್ + ಅ = ಕ).  ಹಾಗಿದ್ದರೆ ಕಕಾರದ ಹಿಂದೆ ಉಳಿದದ್ದೇನು? ಅ್ ಎಂಬ, ರೂಪವಿಲ್ಲದ ವಿಚಿತ್ರ ಶಬ್ದವಷ್ಟೇ.  ಮುಖ್ಯವಾಗಿ ಕೇಳುವುದು ಕ ಎಂಬ ಅಕ್ಷರವಷ್ಟೇ.  ಇನ್ನಿದೇ ಪ್ರಯೋಗವನ್ನು ಇ ಅಕ್ಷರದೊಂದಿಗೆ ಪುನರಾವರ್ತಿಸಿ? (ಇ್ಕ).  ಈಗ ಸ್ವರಾಕ್ಷರದಲ್ಲಿ ಸೀಳಿದ್ದೇನು? ಇ್ ಎಂಬ ರೂಪವಿಲ್ಲದ ವಿಚಿತ್ರ ಶಬ್ದವು ಕಕಾರದ ಎಡಕ್ಕೂ, ಇ ಎಂಬ ಪೂರ್ಣಸ್ವರವು ಕಕಾರದನಂತರವೂ ಬಂದಿತಲ್ಲವೇ? ಇದನ್ನು ಉಚ್ಚರಿಸಿದಾಗ ಕೇಳುವುದೇನು?  ಇ್ + ಕಿ!  ಎಂದರೆ ಇಕಾರವು ಸಂಪೂರ್ಣವಾಗಿ ಕಕಾರಕ್ಕೆ ಸೇರಿಬಿಟ್ಟಿದೆ.  ಇನ್ನು ಹಿಂದೆ ಉಳಿದದ್ದು ಇ್ ಎಂಬ ರೂಪವಿಲ್ಲದ ಶಬ್ದವಷ್ಟೇ.  ಈಗ ಮೊದಲ ಉದಾಹರಣೆಯ ಅ್ ಶಬ್ದಕ್ಕೂ ಈ ಉದಾಹರಣೆಯ ಇ್ ಶಬ್ದಕ್ಕೂ ವ್ಯತ್ಯಾಸವೇನಾದರೂ ಉಂಟೇ? (ಅ ಇ ಎನ್ನುವುದು ಬೇಡ, ಅವು ಕಕಾರದನಂತರ ನುಡಿಯುತ್ತಿರುವ ಪೂರ್ಣಸ್ವರಗಳು - ಟ್ಕ ಎನ್ನುವಾಗಲೂ ಕಕಾರದನಂತರ ಅಕಾರವು ಬಂದಿದೆ, ಆದರೆ ಅದರ ಹಿಂದೆ ಟಕಾರದ ಅರ್ಧಾಕ್ಷರ ಸ್ಪಷ್ಟವಾಗಿ ನುಡಿಯುತ್ತಿದೆ.  ಆದರೆ ಅ್ ಇ್ ಗಳ ವಿಷಯದಲ್ಲಿ ಹೀಗಾಯಿತೇ?).  ಇದೇ ಪ್ರಯೋಗವನ್ನು ಅ್ ಆ್ ಇ್ ಈ್ ಉ್ ಊ್ ಈ ಎಲ್ಲ ’ಅರ್ಧ’ಸ್ವರಗಳೊಂದಿಗೆ ಪುನರಾವರ್ತಿಸಿ ನೋಡಿ - ಅ್ಕ ಆ್ಕ ಇ್ಕ ಈ್ಕ ಉ್ಕ ಊ್ಕ ಹೀಗೆ.  ಇವಕ್ಕೂ ಕ ಕಾ ಕಿ ಕೀ ಕು ಕೂ ಈ ಅಕ್ಷರಗಳಿಗೂ ವ್ಯತ್ಯಾಸವೇನು?  ಮೊದಲ ಗುಂಪಿನಲ್ಲಿ ಸ್ವರಸ್ಥಾನವನ್ನೊತ್ತಿದ ಅ್ ಎಂಬ ಧ್ವನಿ ಕೇಳುತ್ತದಷ್ಟೇ.  ಆದರೆ ಅ್ ಆ್ ಇ್ ಈ್ ಉ್ ಊ್ ಎಂಬ ವ್ಯತ್ಯಾಸವನ್ನು ಅಲ್ಲಿ ಕಂಡುಹಿಡಿಯಬಹುದೇ? ಈಗಲೂ ಹೌದೆನ್ನುವುದಾದರೆ, ಇದು ಇನ್ನೊಂದು ಕಠಿನವಾದ ಪರೀಕ್ಷೆಯನ್ನೆದುರಿಸಬೇಕಾಗುತ್ತದೆ.  ಸ್ವರಾಕ್ಷರವು ಅರ್ಧಾಕ್ಷರವಾಗಬಹುದೆನ್ನುವುದಾದರೆ, ಅದು ಸ್ವತಂತ್ರವಾಗಿಯೇ ಅರ್ಧಾಕ್ಷರವಾಗಿ ನುಡಿಯಬೇಕು.  ಮಸ್ಕ್ ಎನ್ನುವಲ್ಲಿ ಸ್ಕ್ ಎನ್ನುವ ಅಕ್ಷರ ಗಮನಿಸಿ.  ಸ್ ಮತ್ತು ಕ್ ಎರಡೂ ಅರ್ಧಾಕ್ಷರಗಳೇ.  ಎರಡೂ ಸ್ಪಷ್ಟವಾಗಿ ನುಡಿಯುತ್ತವೆ.  ಇಲ್ಲಿನ ಸಕಾರದಂತೆ ಸ್ವರಾಕ್ಷರವೂ ಅರ್ಧಾಕ್ಷರವಾಗಿ ನುಡಿಯಬಲ್ಲುದೇ?  ಪ್ರಯತ್ನಿಸಿ ನೋಡಿ ಮೊದಲೇ ಹೇಳಿದ ಸ್ವರಾಕ್ಷರಗಳಿಗೆ ಕವೊತ್ತನ್ನು ಅರ್ಧಾಕ್ಷರವಾಗಿ ಕೊಟ್ಟು ನೋಡಿ ಅ್ಕ್ ಆ್ಕ್ ಇ್ಕ್ ಈ್ಕ್ ಉ್ಕ್ ಊ್ಕ್.  ಇದನ್ನು ಉಚ್ಚರಿಸಿದಾಗ ಸ್ವರವ್ಯಂಜನಗಳೆರಡೂ ನುಡಿಯುತ್ತವೆಯೇ? ಇವಕ್ಕೂ ಬರೀ ಕ್ ಉಚ್ಚಾರಣೆಗೂ ವ್ಯತ್ಯಾಸವೇನು?

ಆದ್ದರಿಂದ "ಆ್ಯ" ಎಂಬ ’ಸ್ವರ’ಸಂಕೇತ ಬೇಡವೆನ್ನುತ್ತಿರುವುದು ಸ್ವಪ್ರೇರಿತ ಮುಜುಗರದಿಂದಲ್ಲ, ಬದಲಿಗೆ ಈ ಎರಡು ಕಾರಣಗಳಿಂದ:

೧) "ಆ್ಯ" ಎಂಬ ಅಕ್ಷರವನ್ನು ಲಿಪಿಯಲ್ಲಿ ಸಾಧ್ಯವಾಗಿಸಬಹುದಾದರೂ ಅದಕ್ಕೆ ಉಚ್ಚಾರಣೆಯಲ್ಲಿ ಅಸ್ತಿತ್ವವಿಲ್ಲ.  ತಿಳಿದೂ ತಿಳಿದೂ ಉಚ್ಚಾರಣಾಸಾಧುತ್ವವಿಲ್ಲದ ಅಕ್ಷರಗಳನ್ನು ಹುಟ್ಟುಹಾಕುವುದು ವೈಜ್ಞಾನಿಕವಲ್ಲ

೨) ಇಂಗ್ಲಿಷಿನ A ಅಕ್ಷರದ ಉಚ್ಚಾರಣೆ ಸುಮಾರಾಗಿ "ಆ್ಯ" ಎಂಬುದಕ್ಕೆ ಹತ್ತಿರಿರಬಹುದು, ಆದರೆ ಅದೇ ಅಲ್ಲ.  ಆದ್ದರಿಂದ ಆ ಮತ್ತು ಯಾ ಗಳಂತೆಯೇ "ಆ್ಯ" ಎಂಬುದೂ ದಾರಿತಪ್ಪಿಸುವಂಥದ್ದೇ.  ಹೊಸದಾಗಿ ಧ್ವನಿಸಂಕೇತವನ್ನು ತರುವುದಾದರೆ (ಸಾಧ್ಯವಾದರೆ ಅದು ಯಾವಾಗಲೂ ಸ್ವಾಗತಾರ್ಹವೇ), ಸುಮಾರಾಗಿ ಹತ್ತಿರದ್ದೊಂದು ಸಂಕೇತವನ್ನು ತರುವುದರ ಬದಲು ಯಥಾವತ್ತಾಗಿ ಅದನ್ನೇ ಧ್ವನಿಸುವ ಸಂಕೇತಗಳನ್ನು ಜಾರಿಗೆ ತರುವುದು ಒಳ್ಳೆಯದು.  ಸಾಗರಸ್ಸಾಗರೋಪಮಮ್ ಎನ್ನುವಂತೆ A ಅಕ್ಷರಕ್ಕೆ ಅದೇ ಸಾಠಿ.  ಆದ್ದರಿಂದ ಆ ಧ್ವನಿಯನ್ನು ಸಂಕೇತಿಸಲು ಕನ್ನಡದಲ್ಲೂ A ಅಕ್ಷರವನ್ನೇ ಬಳಸಿದರೂ ಅಭ್ಯಂತರವಿರಲಿಕ್ಕಿಲ್ಲ (ಕೈಲಾಸಂ ಈಗಾಗಲೇ ಅಂಥ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ - ಗಡFಖಾನ್ ನೆನಪಿಸಿಕೊಳ್ಳಿ).  ಇರಲಿ, Aಪಲ್, ಕಾFಈ, Zಈಬ್ರಾಗಳು ತೀರ ಅತಿರೇಕವೆನಿಸಿದರೂ, ಅದನ್ನೇ ಯಥಾವತ್ತಾಗಿ ಸೂಚಿಸುವ ಹೊಸ ಸಂಕೇತಗಳನ್ನು ಕನ್ನಡದಲ್ಲಿಯೂ ರೂಢಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ.  ಈಗಾಗಲೇ F Z ಗಳಿಗೆ ಕನ್ನಡದಲ್ಲಿ ಫ಼ ಜ಼ ಎಂದು ಅಡಿಚುಕ್ಕಿಯಿಟ್ಟು ಸೂಚಿಸುತ್ತೇವೆ.  ಹಿಂದಿಯಲ್ಲಿಯೂ ವರ್ಣಮಾಲೆಯಲ್ಲಿಲ್ಲದ ಅನುನಾಸಿಕ ಉಚ್ಚಾರಕ್ಕೆ ಅರ್ಧಚಂದ್ರಬಿಂದುವಿನ ಸಂಕೇತವನ್ನು ಬಳಸುತ್ತಾರೆ (कहाँ).  ಹಾಗೆಯೇ ಕನ್ನಡದಲ್ಲಿಯೂ A ಅಕ್ಷರದ ವಿಶಿಷ್ಟ ಉಚ್ಚಾರವನ್ನು ಸೂಚಿಸಲು ಅ ಅಕ್ಷರದ ಕೆಳಗೆ ಅಡಿಚುಕ್ಕೆಯನ್ನೋ, ಮೇಲೆ ಚಂದ್ರನನ್ನೋ ಇಟ್ಟು ಸೂಚಿಸುವುದು ಹೆಚ್ಚು ಸೂಕ್ತವೆನಿಸುತ್ತದೆ - ಏಕೆಂದರೆ A ಎನ್ನುವುದು ಅ ಎನ್ನುವುದರ ವಿಶಿಷ್ಟ ಉಚ್ಚಾರವೇ ಹೊರತು ಆ್ಯ ಅಲ್ಲ.

ಇವೆಲ್ಲ ವೈಯಾಕರಣನ ಕಸರತ್ತೇ ಇರಬಹುದು, ಆದರೆ ಕನ್ನಡದ ಲಿಪಿ ವರ್ಣಮಾಲೆಯು ಇಂಗ್ಲಿಷಿನಂತೆ ಯರ್ರಾಬಿರ್ರಿ ಬೆಳೆಯುವ ಹಂತಕ್ಕಿಂತ ಬಹು ಮುಂದೆ ಹೋಗಿದೆ.  ಆದ್ದರಿಂದ ಭಾಷೆಯಲ್ಲಲ್ಲದಿದ್ದರೆ ಕೊನೆಯಪಕ್ಷ ವರ್ಣಮಾಲೆಯಲ್ಲಾದರೂ ಈ ರೀತಿಯ ಪ್ರಜ್ಞಾಪೂರ್ವಕ ಕಸರತ್ತು ಅತ್ಯವಶ್ಯ.

2 comments:

sunaath said...

ಪ್ರಿಯ ಮಂಜುನಾಥರೆ,
ನಿಮ್ಮ ಲೇಖನವು ನನಗೆ ಮುದವನ್ನು ಕೊಟ್ಟಿತು. ಇದಕ್ಕಾಗಿಯೇ ಅಲ್ಲವೆ, ‘ಸಜ್ಜನರೊಡನೆ ಗುದ್ದಾಡಬೇಕು’ ಎನ್ನುವುದು. ಇದರಿಂದ ನನ್ನ ತಿಳಿವೂ ಹೆಚ್ಚಿತು. ನಿಜ ಹೇಳಬೇಕೆಂದರೆ, ನಾನು ಹಿರಿಯನೇ ಹೊರತು ವಿದ್ವಾಂಸನಲ್ಲ. ನಿಮ್ಮ ಪ್ರೀತಿಯಿಂದಾಗಿ, ನಿಮಗೆ ಆ ತರಹಾ ಭಾಸವಾಗುತ್ತಿದೆ! ಆದುದರಿಂದ ನಮ್ಮ ‘ಜಗಳಗಳು’ ಇದೇ ರೀತಿ ಮುಂದುವರೆಯುತ್ತಿರಲಿ, ತಿಕ್ಕಾಟದಿಂದಾಗಿ ಹೊಸ ಬೆಳಕು ಹುಟ್ಟಲಿ ಎಂದು ಹಾರೈಸುತ್ತೇನೆ.

Dinamani said...

ಪ್ರಿಯ ಮಂಜುನಾಥರೆ,
ಉತ್ತಮ ತಾರ್ಕಿಕ ಬರಹ. ಆದರೆ ಈ ಹೊಸರೀತಿಯಲ್ಲಿ ಬರೆಯುವ ಅಕ್ಷರಗಳು ಚರ್ಚೆಯಾಗಿ ಎಲ್ಲರ ಒಪ್ಪಿಗೆಯೊಂದಿಗೆ ಕನ್ನಡ ಪ್ರಾಧಿಕಾರ/ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳಿಂದ ಪ್ರಕಟಣೆಯ ಮೂಲಕ, ಈಗಲೇ ಕನ್ನಡದಲ್ಲಿ ಬರೆಯುತ್ತಿರುವ ಲೇಖಕ/ಕಿಯರಿಂದ ಬಳಕೆಗೆ ಬಂದು, ಪಠ್ಯಪುಸ್ತಕ/unicodeಗಳಲ್ಲೂ ಸೇರ್ಪಡೆಯಾದಾಗ ಉದ್ದೇಶ ಪೂರ್ತಿಯಾಗುತ್ತದೆ. ಈ ತರಹದ ಚರ್ಚೆಗಳು ಇದಕ್ಕೆ ಮುನ್ನುಡಿಯಾಗಲಿ.
ಹಾರೈಕೆಗಳೊಂದಿಗೆ... ದಿನಮಣಿ ಬಪ್ಪನಾಡು