Monday, January 21, 2008

ಪರ್ಯಾಯದ ಹುಡುಕಾಟದಲ್ಲಿ...

ಇವತ್ತೇಕೋ ಈ ಕೃತಿ (ಹಾಡು, ದಾಸರ ಪದ, ದೇವರ ನಾಮ... ಏನಾದರೂ ಕರಿಯಿರಿ) ಪದೇ ಪದೇ ಮನಸ್ಸಿನಲ್ಲಿ ಗುನುಗುನಿಸುತ್ತಿದೆ. ದುರದೃಷ್ಟವಶಾತ್, ಅದನ್ನಿಲ್ಲಿ ಹಾಡಿ ತೋರಿಸಲಾರೆ. ಹಂಚಿಕೊಳ್ಳುವ ಕುತೂಹಲಕ್ಕಾಗಿ ಇಲ್ಲಿ ಕೊಡುತ್ತಿದ್ದೇನೆ.

ಏನು ಮಾಡಿದರೇನು ಫಲವೋ,
ನೀನು ಮಾನಸ ವೃತ್ತಿ, ತಿದ್ದುವ ತನಕ [ಪ]

ಭಾರಿ ಪಲ್ಲಕ್ಕಿಯ ಏರಿದ ಅನುಭವ
ನೂರು ಜನದ ಸ್ತುತಿ ಕೇಳಿದ ಅನುಭವ
ಕೀರುತಿಯ ಪರಮಾವಧಿಯನು ಏರಿದೆನೊ ನಾ ನಿನ್ನ ಕರುಣದಿ
ಭಾರಿ ಗಾಳಿಗೆ ತರಗೆಲೆಯು ತಾ ತೂರುವಂದದಿ ತೋರುತಿರುವುದೊ [೧]

ವರಗಳ ಕೊಟ್ಟಾಯ್ತು, ಹಿರಿಯನೆಂದೆನಿಸಾಯ್ತು
ಅರಿತು ಶಾಸ್ತ್ರಾರ್ಥವ, ಗುರುತನ ಪಡೆದಾಯ್ತು
ಧರೆತಲದ ವೈಭವಗಳಲಿ ಅತಿ ಅರುಚಿ ಮನದಲಿ ತೋರುತಿರುವುದೊ
ಕರದೊಳಿರುವ ಪ್ರಸನ್ನನೇ ಹೃತ್ಸರಸಿಜದಿ ನೆಲೆಸೆಲೊ ನಿರಂತರ [೨]

ವ್ಯಾಸರಾಜರ ದಿವ್ಯ ಪರಂಪರೆಯಲ್ಲಿ ಬಂದ ಕವಿ-ಸನ್ಯಾಸಿ-ಗುರು ಪ್ರಸನ್ನತೀರ್ಥರ ಈ ಹಾಡು ಅದೆಷ್ಟು ಅನುಭಾವಪೂರ್ಣವಾಗಿದೆ!

ತಾನೇರಿದ ಕೀರ್ತಿಯ ಪರಮಾವಧಿ, ಹರಿಕೃಪೆಯೆಂಬ ಭಾರಿ ಗಾಳಿಯ ಅಲೆ ಮಾತ್ರ ಎಂಬ ತರಗೆಲೆಯ ಅರಿವು; ಪಲ್ಲಕ್ಕಿಯಲ್ಲಿ ಮೆರೆದದ್ದಾಯ್ತು, ಹಿರಿತನ ಪಡೆದಾಯ್ತು, ಶಾಸ್ತ್ರಾರ್ಥವೋದಿ ಗುರುತನ ಪಡೆದದ್ದೂ ಆಯ್ತು, ಧರೆತಲದ ವೈಭವಗಳಲ್ಲಿ ಇನ್ನೇನು ರುಚಿ ಉಳಿದಿದ್ದೀತು, ಎಂಬ ಮಾಗಿದ ವೈರಾಗ್ಯ; ಕರದಲ್ಲಿ ಕುಳಿತು ಪೂಜೆಗೊಳ್ಳುವ ಹರಿ, ಮನದೊಳಗಿನ್ನೂ ಬಾರದ ವಿಹ್ವಲತೆ - ಸಂಸ್ಥಾನ ಪೂಜೆಗಾಗಿ ಕೈಯಲ್ಲಿ ಗೋಪಾಲಕೃಷ್ಣನ ಮೂರ್ತಿಯನ್ನು ಹಿಡಿದು ಕುಳಿತ (ನಾ ಕಂಡಿಲ್ಲದ) ಆ ವೃದ್ಧ ಸನ್ಯಾಸಿಯ ಮನದಲ್ಲಿ ಮೂಡಿರಬಹುದಾದ ಭಾವತರಂಗಗಳು ನಿರಂತರ ಪ್ರತಿಮೆಗಳಾಗಿ ಕಾಡುತ್ತವೆ.

ಒಮ್ಮೊಮ್ಮೆ ಹೀಗೇ, ಮನಸ್ಸು ಎಲ್ಲೆಲ್ಲೋ ಅಲೆಯುತ್ತದೆ, ಯಾವುದೋ ನೆರಳಲ್ಲಿ ತಂಗಬಯಸುತ್ತದೆ, ಯಾವುದೋ ತೀರ್ಥದಲ್ಲಿ ತಣಿಯಬಯಸುತ್ತದೆ. ಯಾವುದೋ ಒಂದು ಮಾತು, ಪ್ರತಿಮೆ, ರೂಪಕ, ಮನವನ್ನು ಕಟ್ಟಿ ನಿಲ್ಲಿಸುತ್ತದೆ, ಎದೆಯನ್ನು ತೋಯಿಸುತ್ತದೆ. ವಾಸ್ತವದ ಪಯಣವನ್ನು ಸಹ್ಯಗೊಳಿಸಲು ಬಹುಶಃ ಇದೆಲ್ಲ ಬೇಕೇನೋ.

ಬೆಳಗೆದ್ದರೆ ದಿನಪತ್ರಿಕೆಗಳಲ್ಲಿ ಒಂದೇ ಸುದ್ದಿ - ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಜಂಗೀ ಕುಸ್ತಿ. ವಿದೇಶ ಯಾನ ಮಾಡಿದ ಯತಿಗೆ ಕೃಷ್ಣ ಪೂಜೆಯ ಹಕ್ಕಿಲ್ಲವಂತೆ ("ಶಮಯನ್ ಭವಸಂತಾಪಂ, ರಮಯನ್ ಸಾಧು ಚಾತಕಾನ್; ಕೃಷ್ಣಮೇಘ ಕೃಪಾದೃಷ್ಟಿ: ವೃಷ್ಟ್ಯಾ ತುಷ್ಣಾತು ಮಾಮಪಿ" - ಯಾವುದೀ ದಿವ್ಯವಾಣಿ!); ಆ 'ಹಕ್ಕು' ಚಲಾಯಿಸಲು ಬಲು ದೊಡ್ಡ ಮಾರಾಮಾರಿ! ಗೆದ್ದವರು, ಬಿದ್ದ ಮೀಸೆಯ ಮಣ್ಣು ಕೊಡವಿಕೊಳ್ಳುವವರು, ದೇಶ ಸುತ್ತಿದವರು, ಕೋಶ ಓದಿದವರು-ಓದದವರು, ಇದ್ದಲ್ಲೇ ಸುಖ ಮೆದ್ದವರು, ಅದು ದಕ್ಕದೇ ಮನದಲ್ಲೇ ಕುದ್ದವರು... ಹಿರಿಯರ ಉಪವಾಸ, ಕಿರಿಯರ ಉದಾಸ, ಕೊನೆಗೂ ಗೆದ್ದ ಕೋಟೆ, ಹೊಸ ಇತಿಹಾಸ, ವೈಭವಪೂರ್ಣ ಸ್ವಯಂ ಮೆರವಣಿಗೆ, ಅಕ್ಷಯಪಾತ್ರೆ-ಸಟ್ಟುಗ, ಖಜಾನೆ ಕೀಲಿ ಕೈ, ಕೃಷ್ಣನ ವಿಗ್ರಹಕ್ಕೆ ವೈಭವದ ಮಂಗಳಾರತಿ, ಪತ್ರಿಕೆಯಲ್ಲಿ ಫೋಟೊ... ಕಲಸು ಮಲಸು ಕೊಲಾಜು ಚಿತ್ರದ ನಡುವೆ, 'ಹಕ್ಕು' ಸಾಧಿಸಿ ಮುಂದೆ ಕುಳಿತ ಸನ್ಯಾಸಿಯ ವಿಜಯದಾರತಿಯ ಪ್ರಭೆಗೆ ಹೊಳೆಯುವ ರನ್ನದ ಕವಚ, ಚಿನ್ನದ ಒಡವೆಗಳ ಮರೆಯಲ್ಲಿ ಮೆಲ್ಲಗೆ ನಗುವ ಕಳ್ಳ ಕೃಷ್ಣ... "ಕರದೊಳಿರುವ ಪ್ರಸನ್ನನೇ ಹೃತ್ಸರಸಿಜದಿ ನೆಲೆಸೆಲೋ ನಿರಂತರ..."

ಕ್ಷಮಿಸಿ, ಎಲ್ಲಿಂದ ಎಲ್ಲಿಗೋ ಬಂದೆ!

1 comment:

Dr.Samir Kagalkar said...

well worded :)
am reminded of one more ref from HKAS:

kanDa neeroLu muLugi dehava danDisi phalavenu
danDa kamamDalagaLane dharisi yatiendanisi phalavenu
anDajaadhipanamsagata padapunDareekadi manavahaRnisHi
banDu..........sukhapaDatippa manavanu

a very sad thing that should not have happened, of all places at Udupi (: